ಹಂಪಿ ದರ್ಶನ
ಭಾಗ ೧
ಪುರಂದರ ನಮನ
ಹಂಪಿಯು ಕರ್ನಾಟಕ ರಾಜ್ಯದ ಅತ್ಯುನ್ನತ ಪ್ರವಾಸಿ ತಾಣಗಳಲ್ಲಿ ಪ್ರಮುಖವಾದದ್ದು. ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು, ವಿಶ್ವಸಂಸ್ಥೆಯಿಂದ ಸಂರಕ್ಷಿಸಲ್ಪಡುತ್ತಿರುವ ಐತಿಹಾಸಿಕವಾದ ಸುಪ್ರಸಿದ್ಧ ಸ್ಥಳ ಇದು. ವಿಜಯ ನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಇಲ್ಲಿನ ಪ್ರಜೆಗಳು ಶ್ರೀಮಂತಿಕೆ, ಸಂಸ್ಕೃತಿ,ಆಧ್ಯಾತ್ಮ, ಸಂಗೀತ, ಶಿಲ್ಪ-ಕಲೆ ಈ ಎಲ್ಲ ಕ್ಷೇತ್ರಗಳಲ್ಲಿ ಅತ್ಯದ್ಭುತ ಸಾಧನೆಯನ್ನು ಮಾಡಿ ವೈಭವಾಡಂಬರದಿಂದ ಮೆರೆದದ್ದಕ್ಕೆ ಸಾಕ್ಷಿ ಈ ದಿವ್ಯ ಕ್ಷೇತ್ರ.
ಪ್ರಕೃತಿಯ ಸೃಷ್ಠಿ-ಸ್ಥಿತಿ-ಲಯಗಳ ತತ್ವದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಿಂದ ಪ್ರಾರಂಭವಾಗಿ ಅದರ ವೈಭವದಿಂದ ಹಿಡಿದು ಕೊನೆಯದಾಗಿ ಅದರ ವಿನಾಶಕ್ಕೂ ಸಾಕ್ಷಿಯಾಗಿತ್ತು ಈ ನಮ್ಮ ಹಂಪಿ. ಮಾನವತೆಯ ಅದ್ಭುತ ಸಾಧನೆಗಳಿಗೆ ಸಾಕ್ಷಿಯಾದ ಹಂಪಿಯಲ್ಲಿ ಇಂದಿಗೆ ಕೇವಲ ಅವಶೇಷಗಳನ್ನು ಮಾತ್ರ ಕಾಣಬಹುದು. ತಮಾಶೆಗೆ ಇದನ್ನು ಹಾಳು-ಹಂಪೆ ಎಂದಾಗಿಯೂ ಕರೆಯುವುದುಂಟು. ಆದರೂ ಹಂಪಿಯ ವೀಕ್ಷಣೆಯಿಂದ ಬರುವ ಅನುಭವವು ಇಂದಿಗೂ ಯಾರನ್ನಾದರೂ ಅವಾಕ್ಕಾಗಿಸಬಲ್ಲುದು. ವಿದೇಶಿಯರಿಗೆ ಇದನ್ನು ಸಂರಕ್ಷಿಸುವ ಆಲೋಚನೆ ಬಂದದ್ದಲ್ಲಿ ವಿಸ್ಮಯವೇನೂ ಇಲ್ಲ. ಅಷ್ಟು ಅದ್ಭುತವಾಗಿದೆ ಇಲ್ಲಿನ ಭವ್ಯ ಪರಂಪರೆ. ಆ ಪರಂಪರೆಗಳು ಶಿಲ್ಪಕಲೆಯದ್ದೂ ಹೌದು, ಅಧ್ಯಾತ್ಮದ್ದೂ ಹೌದು, ಕರ್ನಾಟಕ ಶಾಸ್ತ್ರೀಯ ಸಂಗೀತದ್ದೂ ಹೌದು. ಹಂಪೆಯನ್ನು ಐತಿಹಾಸಿಕ ಕಲಾ-ಕಾಶಿ ಎಂದರೂ ಉತ್ಪ್ರೇಕ್ಷೆಯಾಗದು. ಅಂದು ಚೀನೀ ಪ್ರವಾಸಿಗನೊಬ್ಬನು ಮುತ್ತು-ರತ್ನಗಳನ್ನು ಮಾರುವ ಸಾಲು ಮಂಟಪಗಳನ್ನು ಕಂಡು ಮೈಮರೆತರೆ ಇಂದಿಗೆ ಈ ಬೃಹತ್ ಶಿಲಾ-ದೇಗುಲಗಳ ಕೇವಲ ಅವಶೇಷಗಳನ್ನು ಕಂಡು ಮೈರೆತವರಲ್ಲಿ ನಾನೂ ಒಬ್ಬ.
ಕರ್ನಾಟಕ ಶಾಸ್ತ್ರೀಯ ಸಂಗೀತದ ತವರೂರು ಹಂಪಿಯೆಂದರೆ ತಪ್ಪಾಗದು. ನಮ್ಮ ಕರ್ನಾಟಕ ಸಂಗೀತದ ಪಿತಾಮಹರೆನಿಸಿಕೊಂಡ, ದಾಸಷ್ರೇಷ್ಠರೆನಿಸಿಕೊಂಡ ಶ್ರೀ ಪುರಂದರ ದಾಸರು ತಮ್ಮ ರಚನೆಗಳನ್ನು ರಚಿಸಿದ್ದೇ ಇಲ್ಲಿ.
ಈ ನಿಟ್ಟಿನಲ್ಲಿ ನನ್ನ ಬಾಲ್ಯದಲ್ಲಿನ ನನ್ನ ಸಂಗೀತ ಶಾಲೆಯ ಗುರುಗಳಾದ ಶ್ರೀಮತಿ ಪವನ ಬಾಲಚಂದ್ರ ಆಚಾರ್ಯ ಅವರ ಆಶಯದಂತೆ, ಅವರ ’ಕಲಾಸ್ಪಂದನ ಶಾಲೆ’ಯ ವಿದ್ಯಾರ್ಥಿಗಳಾದ ನಾವು ಹಾಗೂ ಅವರ ಪಂಚ-ವೀಣಾ ತಂಡದ ಸದಸ್ಯರಾದ ನಾವೆಲ್ಲರೂ ಹಂಪೆಗೆ ಭೇಟಿ ಕೊಡುವ ಒಂದು ಪುಟ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಮೊಟ್ಟ ಮೊದಲಿಗೆ ದೂರದ ಹಂಪೆಯ ಪ್ರವಾಸ ಮಾಡಲಿಕ್ಕೆ ಹಿಂದೆ ಮುಂದೆ ಆಲೋಚಿಸಿದ್ದರೂ, ಕೆಲವು ವರ್ಷಗಳ ಹಿಂದೆ ಹಂಪಿಯ ಸುತ್ತಮುತ್ತಲಿರುವ ಕನಕಗಿರಿ, ಅಂಜನಾದ್ರಿ ಪರ್ವತ, ಮಧ್ವ ಪರಂಪರೆಯ ಯತಿಗಳ ನವವೃಂದಾವನ-ಕ್ಷೇತ್ರ ಮತ್ತು ಇನ್ನಿತರ ಕ್ಷೇತ್ರಗಳ ಪ್ರವಾಸದ ಅಪೂರ್ವ ಅನುಭವಗಳ ನೆನಪುಗಳು ನಮ್ಮೆಲ್ಲರನ್ನು ಮತ್ತೆ ಆ ಕಡೆ ಹೋಗುವಲ್ಲಿ ಪ್ರೇರೇಪಿಸಿತು .
ಈ ಬಾರಿ ನಾವು ಹಂಪೆಯ ಪ್ರವಾಸಕ್ಕೆ ಎರಡು ದಿನಗಳು ಮೀಸಲಿಟ್ಟಿದ್ದೆವು. ಹಿಂದಿನ ಬಾರಿ ಅಂಜನಾದ್ರಿ ಪರ್ವತ ತುದಿಯಿಂದ ದೂರದಲ್ಲಿದ್ದ ವಿರೂಪಾಕ್ಷ , ವಿಜಯ-ವಿಠ್ಠಲ ದೇವಳಗಳನ್ನು, ತುಂಗಾ ನದಿ ಇತ್ಯಾದಿಗಳನ್ನು ಕಂಡು ಅತ್ತ ಹೋಗಲು ಬಯಸಿದ್ದರೂ, ಸಮಯಾಭಾವದಿಂದ ಹೋಗಲಾಗಲಿಲ್ಲ. ಹಾಗೆ ಈ ಬಾರಿ ಪುರಂದರ ದಾಸರ ಶ್ರದ್ಧಾ-ವಿಶ್ರಾಂತಿ ಸ್ಥಳವಾದ ಪುರಂದರ ಮಂಟಪ ಮತ್ತು ವಿಜಯನಗರ ಸಾಮರಾಜ್ಯದ ಪ್ರಮುಖ ದೇವಳಗಳ ಭೇಟಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿದ್ದೆವು. ಗುರುಗಳ ಶಿಷ್ಯರಾಗಿರುವ ಮತ್ತು ನಮ್ಮ ಪಂಚವೀಣಾ ತಂಡದಲ್ಲಿನ ಮಿತ್ರರಾದ ಹಂಪೆಯವರೇ ಆದ ಅರ್ಜುನ್ ಅವರ ಮನೆಯಲ್ಲಿ ಎರಡು ದಿನಗಳ ವಾಸ, ಪ್ರವಾಸಕ್ಕೆ ಬೇಕಾದ ಎಲ್ಲಾ ರೀತಿಯ ಅನುಕೂಲಗಳಿಗೆ ಅವರ ಸಂಪೂರ್ಣ ಸಹಕಾರ ಹಾಗೂ ಅವರ ಕುಟುಂಬಸ್ಥರ ಹೃದಯಸ್ಪರ್ಶೀ ಆತಿಥ್ಯದಿಂದ ನಮ್ಮ ಈ ಎರಡು ದಿನಗಳ ಹಂಪೆಯ ಪ್ರವಾಸ ಇನ್ನಷ್ಟು ಚಿರಸ್ಮರಣೀಯವಾಯಿತು.
ಈ ಎರಡು ದಿನಗಳ ಅಪೂರ್ವ ಅನುಭವದ ಕೆಲವು ದೃಶ್ಯಗಳು ಇಲ್ಲಿ ಕೆಳಗಿವೆ.
![]() |
| ವಿಪಂಚಿ ಬಳಗದ ಕೆಲವು ಸದಸ್ಯರು. ಇನ್ನಿತರರಿಗೆ ಕಾರಣಾಂತರಗಳಿಂದ ಈ ಬಾರಿ ಬರಲು ಸಾಧ್ಯವಾಗಲಿಲ್ಲ. |
ಬಾಲ್ಯದಲ್ಲಿ ತಾನು ಓಡಾಡಿ ಬೆಳೆದ ಹಂಪೆಯ ಎರಡು ದಿನಗಳ ಪ್ರವಾಸದ ಸಾರಥ್ಯವನ್ನು ವಹಿಸಿಕೊಂಡ ಅರ್ಜುನ್, ಹಾಗೆಯೇ ಅವರ ಕುಟುಂಬೇತರರು ಮೊಟ್ಟ ಮೊದಲಿಗೆ ನಮಗೆ ಕರೆದೊಯ್ದದ್ದು ಮಾಲ್ಯವಂತ-ಪರ್ವತ ಎಂಬ ಸ್ಥಳಕ್ಕೆ. ಸ್ಥಳೀಯರ ಪ್ರಕಾರ ಇದು ರಾಮಾಯಣದ ಶ್ರೀ ರಾಮನು ತನ್ನ ವನವಾಸ ಕಾಲದಲ್ಲಿ ಕಾವಿ ಧರಿಸಿದ ತಾನು, ತನ್ನ ಚಾತುರ್ಮಾಸವನ್ನು ಇಲ್ಲಿ ಮಾಡಿದ್ದನು ಎಂಬುದಕ್ಕೆ ಹೆಸರುವಾಸಿಯಾಗಿದೆ. ಆ ನಿಟ್ಟಿನಲ್ಲಿ ಇಲ್ಲಿ ಶ್ರೀ ರಾಮನಿಗೆ ಸಮರ್ಪಿತ ಒಂದು ಬೃಹತ್, ಪುರಾತನ ದೇವಾಲಯವಿದೆ. ವೈವಿಧ್ಯಮಯ ಶಿಲ್ಪಕಲೆಯಿಂದ ಕೂಡಿದ ಈ ದೇವಾಲಯವು ಮನಸೂರೆಗೊಳ್ಳುವಂತಿದ್ದು, ಇಲ್ಲಿನ ಪರಿಸರವು ಎತ್ತರ ಸ್ಥಳದಲ್ಲಿದ್ದು, ಬೃಹದಾಕಾರದ ಕಲ್ಲು-ಬಂಡೆಗಳಿಂದ ಸುತ್ತುವರಿದಿದ್ದು, ಅತ್ಯಂತ ಪ್ರಶಾಂತವಾಗಿದೆ.
![]() |
| ರಾಮ ದೇವಳದ ಪ್ರವೇಶ ಗೋಪುರ |
ಮಾಲ್ಯವಂತ ದೇವಾಲಯದಲ್ಲಿ ಪೂಜೆಗೊಳ್ಳುವ ಕುಳಿತ ಭಂಗಿಯಲ್ಲಿ ಲಕ್ಷ್ಮಣ, ಹನುಮಂತ ಸಮೇತ
ಶ್ರೀ ಸೀತಾ-ರಾಮಚಂದ್ರ ದೇವರು.
ಶ್ರೀ ಸೀತಾ-ರಾಮಚಂದ್ರ ದೇವರು.
![]() |
| ಇಲ್ಲಿ ನಾವೆಲ್ಲರೂ ತುಸು ಹೊತ್ತು ಶ್ರುತಿ-ತಾಳ-ಮೃದಂಗ ಸಮೇತ ಭಜನೆಯನ್ನು ನಡೆಸಿದೆವು. |
ಮಾಲ್ಯವಂತ ಪರ್ವತದಲ್ಲಿ ದೇವಳದ ಹಿಂದೆ ಶಿವನ ಗುಡಿಯಿದ್ದು, ಪಕ್ಕದಲ್ಲಿ ಪಿಂಡ-ಪ್ರದಾನ ಸ್ಥಳವಿದೆ. ಇಲ್ಲಿ ಶ್ರೀ ರಾಮನು ತನ್ನ ತಂದೆ ದಶರಥ ಮಹಾರಜನ ಶ್ರಾದ್ಧದ ಸಮಯದಲ್ಲಿ ಪಿಂಡ-ಪ್ರದಾನ ಮಾಡಿದ್ದನೆಂದು ಪ್ರತೀತಿಯಿದ್ದು, ನೆಲದ ಮೇಲೆ ಕಲ್ಲಿನಲ್ಲಿ ಕೆತ್ತಲ್ಪಟ್ಟ ಹಲವು ಕುರುಹುಗಳಿವೆ.
ಹಂಪಿ ನಗರದಲ್ಲಿ ಒಂದು ಪ್ರಾಕೃತಿಕವಾಗಿ ಕಾಣಬರುವ ಅಚ್ಚರಿಯ ಸಂಗತಿಯೆಂದರೆ ಅಲ್ಲಿನ ಬಂಡೆಗಳು. ನಂಬಲಸಾಧ್ಯವಾದ ಅವುಗಳ ಗಾತ್ರವು ಒಂದು ವಿಷಯವಾದರೆ ಮತ್ತೊಂದು ಕುತೂಹಲಕಾರಿಯಾದ ಸಂಗತಿ ಎಂದರೆ ಒಂದರ ಮೇಲೊಂದು ಅವು ಯಾವುದೇ ಆಧಾರವಿಲ್ಲದೇ ನಿಂತಿರುವುದು. ರಾತ್ರಿ ಹೊತ್ತಲ್ಲಿ ಎಲ್ಲರೂ ಮಲಗಿರುವ ಸಮಯದಲ್ಲಿ ಆಕಾಶದಿಂದಿಳಿದು ಬಂದ ದೈತ್ಯಾಕಾರದ ಜೀವಿಗಳು, ಲಗೋರಿ ಆಡಲು ಒಂದರ ಮೇಲೊಂದು ಕಲ್ಲುಗಳನ್ನು ಜೋಡಿಸಿಟ್ಟಿರಬಹುದೆ ಅನಿಸುವಂತೆ, ನಮ್ಮ ಕಲ್ಪನೆಯನ್ನು ಅಣಕಿಸುವಂತಿವೆ ಈ ಬೃಹತ್ ಬಂಡೆಗಳು.
| ಆಡೋಣ ಬಾರೋ ರಂಗ... :-D |
![]() |
| ಆಧಾರ ಸ್ಥಂಭಗಳು! |
![]() |
| pose-ಗಾಗಿ ಯೋಗಾನುಭವ! ;-D |
ಮ್ಹಾಲ್ಪೆಯ್ವಂತ ಪರ್ವತದಿಂದ ಹಲವಾರು ಪ್ರಸಿದ್ಧ ಬೆಟ್ಟಗಳನ್ನು ಕಾಣಬಹುದು. ಅಂಜನಾದ್ರಿ ಪರ್ವತ, ರಿಷ್ಯಮೂಕ ಪರ್ವತ ಇತ್ಯಾದಿಗಳನ್ನು ಇಲ್ಲಿಂದ ನಾವು ಕಂಡೆವು.(ಚಿತ್ರ ಇಲ್ಲ)
ಹಂಪಿಯನ್ನು ಅಂದಿನ ಅರಸರು ಬಹುಶಃ ಒಂದು ದೊಡ್ಡ ಪಟ್ಟಣದಂತೆ ಬೆಳೆಸಿದ್ದರು . ಹೀಗೆ, ನಾವು ಸಂದರ್ಶಿಸಬೇಕಾದ ಪ್ರಮುಖ ಸ್ಥಳಗಳು ಹಂಪೆಯಲ್ಲಿ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಹಂಪೆಯ ಎಲ್ಲಾ ಪ್ರಮುಖ ಸ್ಥಳಗಳನ್ನು ಸರಿಯಾಗಿ ನೋಡಲು ಕನಿಷ್ಠ ೭ ದಿನಗಳು ಬೇಕೆನ್ನುತ್ತಾರೆ ಸ್ಥಳೀಯರು. ಓರ್ವರು ನಮಗೆ ತಿಳಿಸಿದ ಪ್ರಕಾರ ಅರಸ ಕೃಷ್ಣದೇವರಾಯನು ತನ್ನ ಕುದುರೆಯ ಮೇಲೆ ಸವಾರಿ ಮಾಡುತ್ತ ಹಂಪೆಯನ್ನು ನೋಡಲು ಹೊರಟರೆ ೩ ದಿನಗಳು ತಗಲುತ್ತಿದ್ದವಂತೆ!
ಮುಂದೆ ನಾವು ವಿಷ್ಣು ದೇವಾಲಯವಾದ ವಿಜಯ-ವಿಠ್ಠಲ ದೇವಾಲಯವನ್ನು ನೋಡಲು ಹೋದೆವು. ಇದೇ ದೇವಾಲಯದ ಪ್ರಾಂಗಣದಲ್ಲಿ ಕಾಣಬಹುದಾಗಿದೆ ವಿಶ್ವ ವಿಖ್ಯಾತವಾದ ಶಿಲ್ಪ-ರಥ ಅಥವಾ ಕಲ್ಲಿನ ರಥವನ್ನು. ಇದು ವಿಶ್ವ ಸಂಸ್ಥೆಯಿಂದ "World Heritage Site" ಎಂದು ಘೋಷಿಸಲ್ಪಟ್ಟ ನಮ್ಮೆಲ್ಲರ ಹೆಮ್ಮೆಯ ಪ್ರವಾಸಿ ತಾಣ.
ಕಳೆದ ಬಾರಿಯ ಅಂಜನಾದ್ರಿ ಪ್ರವಾಸದಿಂದ ಕೆಲವು ಚಿತ್ರಗಳು:
![]() |
| ಅಂಜನಾದ್ರಿ ಬೆಟ್ಟದ ತಪ್ಪಲಿನಿಂದ ಹಂಪಿಯ ಒಂದು ವಿಹಂಗಮ ನೋಟ ; ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಬಂದು ನಡೆದಾಡಿದ ಕಿಷ್ಕಿಂದೆ ಇದೇ ಹಂಪಿಯಂತೆ |
![]() |
| ವಿಜಯ-ವಿಟ್ಠಲ ದೇವಾಲಯ, ಅದರೊಳಗೆ ಕಲ್ಲಿನ ರಥ : ಅಂಜನಾದ್ರಿಯ ಮೇಲಿನಿಂದ |
| ವಿರೂಪಾಕ್ಷ ಕರುಣಾಕರ : ಅಂಜನಾದ್ರಿಯ ಮೇಲಿನಿಂದ ನೋಟ |
![]() |
| ವಾಲಿಯಿಂದ ಜೀವ ಬೆದರಿಕೆಗೊಳಗಾದ ಸುಗ್ರೀವನು ಬಚ್ಚಿಟ್ಟು ಕುಳಿತಿದ್ದು ಈ ಪರ್ವತದ ಮೇಲೆ. ಇದರ ಕೆಳಗೆಯೇ ಮೊದಲ ಬಾರಿಗೆ ಹನುಮಂತನು ರಾಮ-ಲಕ್ಷ್ಮಣರನ್ನು ಮಾತನಾಡಿಸಿದ್ದು. |
| ಪರ್ವತ ಏರಲು ದಮ್ಮುಂಟೆ?! |
ವಿಜಯ ವಿಟ್ಠಲ ದೇವಳ . . .
ಇಲ್ಲಿ ಪ್ರವಾಸಿಗರನ್ನು ವಿಶೇಷ ವಿದ್ಯುತ್ಚಲಿತ ವಾಹನಗಳಲ್ಲಿ, ಕಡಿಮೆ ದರದಲ್ಲಿ ಇಲಾಖೆಯ ಸಿಬ್ಬಂದಿಗಳು ಕರೆದೊಯ್ಯುತ್ತಾರೆ. ಹೊಗೆ ಸೂಸುವ ವಾಹನಗಳಿಂದ ಕಲ್ಲಿನ ಕಟ್ಟಡಗಳಿಗೆ ರಕ್ಷಣೆ ನೀಡುವ ದೃಷ್ಟಿಯಲ್ಲಿ ಪ್ರಾಯಶಃ ಈ ಕ್ರಮ.
![]() |
| ವಾಹನಗಳಲ್ಲಿ ಕೂರಲು ಸರತಿಯಲ್ಲಿ ನಿಂತಾಗ ಒಂದು quick ಸೆಲ್ಫೀ-ಪೋಸ್ |
ಜಟಕಾ ಬಂಡಿಯ ಮೇಲೆ ಸಾಗುತ್ತಾ, ಸಾಗುತ್ತಾ......
![]() |
| ಉತ್ಖನನ ಮಾಡಿದಾಗ ಕಂಡು ಬಂದ ಒಂದು ಆಲಯದ ಗೋಪುರ |
![]() |
| ವಿಜಯ ವಿಠ್ಠಲನತ್ತ ಸಾಗುತ್ತಿರುವಾಗ ಅತ್ತ-ಇತ್ತ ಕಂಡು ಬಂದ ಸಾಲು ಮಂಟಪಗಳು |
![]() |
| ವಿಜಯ ವಿಟ್ಠಲ ದೇವಳದ ಮುಖ್ಯ ದ್ವಾರ |
ಅನ್ಯ ದೊರೆಗಳ ಆಕ್ರಮಣಕ್ಕೆಒಳಗಾದ ಸಮಯದಲ್ಲಿ ಬಹುತೇಕ ಅದ್ಭುತ ಸ್ಥಳಗಳನ್ನು ಧ್ವಂಸಗೊಳಿಸಲಾಯಿತು. ಮೇಲೆ ಮುಖ್ಯ ದ್ವಾರದ ಗೋಪುರದ ಅವಶೇಷಗಳನ್ನು ಕಾಣಬಹುದು.
ಇಲ್ಲಿ ನಮ್ಮೆಲ್ಲರಿಗೊಂದು ಆಶ್ಚರ್ಯ ಕಾದಿತ್ತು. ಮೊದಲು ನಮ್ಮ ಪಯಣ ಸಾಗಿದ್ದು ವಿಜಯ-ವಿಠ್ಠಲ ದೇವಳದ ಹಿಂದಿರುವ ಪುರಂದರ ಮಂಟಪದತ್ತ, ದೇವಳದತ್ತ ಅಲ್ಲ. ತುಂಗಾ ನದಿಯ ದಡದಲ್ಲಿ ಸ್ಥಿತವಾದ ಈ ನಯನ ಮನೋಹರವಾದ ಮಂಟಪದಲ್ಲಿ ದಾಸವರೇಣ್ಯರು ಅದೆಷ್ಟು ಕಾಲ ಕಳೆದಿದ್ದರೋ, ಅದೆಷ್ಟು ಪದಗಳನ್ನು ರಚಿಸಿದ್ದರೋ! ಮಳೆಗಾಲದ ಸಮಯದಲ್ಲಿ ಪ್ರತಿ ವರುಷ ಈ ಮಂಟಪವು ಉಕ್ಕಿ ಹರಿವ ತುಂಗಾ ನದಿಯ ಪಾಲಾಗಿ ಹೋಗಿ, ಕೇವಲ ಇದರ ಗೋಪುರದ ತುದಿ ಮಾತ್ರ ಕಾಣುತ್ತದಂತೆ. ಈ ಬಾರಿ ಮಳೆ ಕಡಿಮೆಯಾದ್ದರಿಂದ ಪಕ್ಕದ ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಹರಿವ ನೀರು ಕಡಿಮೆಯಾದ್ದರಿಂದ ನಮ್ಮ ಸೌಭಾಗ್ಯವೋ ಎಂಬಂತೆ ನಮಗೆ ಈ ಮಂಟಪವನ್ನು ಪ್ರವೇಶಿಸಲು ಸಾಧ್ಯವಾಯಿತು. ಆದರೂ ಪಕ್ಕದಲ್ಲಿ ಶುದ್ಧಳಾದ ತುಂಗೆಯು ಸಣ್ಣ ಮಟ್ಟದಲ್ಲಿ, ಆದರೂ ಅಪಾಯಕರವೆನಿಸುವಂತೆ ಹರಿಯುತ್ತಿದ್ದಳು.
ತುಂಗೆಯು ಸುಮಾರು ೧ರಿಂದ ೨ ಕಿ.ಮೀ.ಗಳಷ್ಟು ಅಗಲವಿರುವ ನದಿ!(ಮೇಲಿನ ಪಕ್ಷಿನೋಟದಲ್ಲಿ ಕಾಣಬಹುದು) ಕಳೆದ ಬಾರಿ ನಾವು ಮತ್ತೊಂದು ಕಡೆಯ ದಡದಿಂದ ದೋಣಿಯ ಮೂಲಕ ನದಿಯ ಮಧ್ಯದಲ್ಲಿರುವ ನವವೃಂದಾವನಕ್ಕೆ ಹೋದರೆ ಈ ಬಾರಿ ಈ ಕಡೆಯ ದಡದಲ್ಲಿ ಸ್ಥಿತವಾದ ಈ ಮಂಟಪಕ್ಕೆ ಬಂದೆವು.
ತುಂಗೆಯು ಸುಮಾರು ೧ರಿಂದ ೨ ಕಿ.ಮೀ.ಗಳಷ್ಟು ಅಗಲವಿರುವ ನದಿ!(ಮೇಲಿನ ಪಕ್ಷಿನೋಟದಲ್ಲಿ ಕಾಣಬಹುದು) ಕಳೆದ ಬಾರಿ ನಾವು ಮತ್ತೊಂದು ಕಡೆಯ ದಡದಿಂದ ದೋಣಿಯ ಮೂಲಕ ನದಿಯ ಮಧ್ಯದಲ್ಲಿರುವ ನವವೃಂದಾವನಕ್ಕೆ ಹೋದರೆ ಈ ಬಾರಿ ಈ ಕಡೆಯ ದಡದಲ್ಲಿ ಸ್ಥಿತವಾದ ಈ ಮಂಟಪಕ್ಕೆ ಬಂದೆವು.
| ಕಳೆದ ಪ್ರವಾಸದಲ್ಲಿ ನವವೃಂದಾವನದತ್ತ.... |
| ದೋಣಿ ಸಾಗಲಿ ಮುಂದೆ ಹೋಗಲಿ.... |
| ನವ ವೃಂದಾವನ ಕ್ಷೇತ್ರ |
ವಿಜಯ ವಿಟ್ಠಲನ ಬಳಿಯ ಪುರಂದರ ಮಂಟಪದತ್ತ .....
![]() |
| ದೇವಳದ ಹಿಂದೆ ಮಂಟಪಕ್ಕೆ ಹೋಗುವ ದಾರಿಯಲ್ಲಿ ವೀಣೆ ಹಿಡಿದ ಗುರುಗಳು , ಬೈಕಿನಲ್ಲಿ ಹಿಂದೆ ಕುಳಿತ ಅವರ ಧರ್ಮಪತಿಯವರು |
ಈ ಮಂಟಪವನ್ನು ದಾಸರಿಗೆಂದೇ ಕಟ್ಟಿದ್ದರೋ ಅಥವಾ ರಾಜ ಮನೆತನದವರ ವಿಹಾರ-ವಿಶ್ರಾಂತಿಗೆಂದು ಕಟ್ಟಿದ್ದರೋ ಅಥವ ಇನ್ನಿತರ ಕಾರಣಕ್ಕೆ ಕಟ್ಟಿದ್ದರೋ ತಿಳಿದಿಲ್ಲ; ಆದರೆ ಪುರಂದರಗಡದ ದಾಸರು ಇಲ್ಲೇ ಕುಳಿತು ತಮ್ಮ ಇಷ್ಟದೇವನಾದ ವಿಟ್ಠಲನ ಮೇಲೆ ಪದಗಳನ್ನು ರಚಿಸಿ ಹಾಡಿದ್ದು ಇತಿಹಾಸ. ಆದ್ದರಿಂದ ಇದು ಪುರಂದರ ಮಂಟಪ.
ನಮ್ಮ ಟೀಚರ್ ಆಶಯದಂತೆ ನಾವೆಲ್ಲರೂ ಇಲ್ಲಿ ತುಸು ಹೊತ್ತು ದಾಸರ ರಚನೆಗಳ ಒಂದು ಪುಟ್ಟ ಕಛೇರಿ ನಡೆಸುವ ರೂಪುರೇಷೆ ಹಾಕಿದ್ದೆವು. ಅದರಂತೆ ಕರ್ನಾಟಕ ಸಂಗೀತದ ಬಾಲಪಾಠಗಳಾದ ಪಿಳ್ಳಾರಿ ಗೀತೆಗಳು, ಹಲವು ದಾಸರ ಪದಗಳನ್ನು ಹಾಡಿ ಪುರಂದರ ದಾಸರಿಗೆ ನಮ್ಮ ಪುಟ್ಟ ನಮಗಳನ್ನು ಸಲ್ಲಿಸಿದೆವು. ಗುರುಗಳು ಮತ್ತು ಅವರ ಪತಿಯವರು ವೀಣೆ ಮತ್ತು ಮೃದಂಗಗಳನ್ನು ನುಡಿಸಿದರೆ, ಉಳಿದ ನಾವೆಲ್ಲರೂ ಉಚ್ಚ ಸ್ವರದಲ್ಲಿ ಹುಮ್ಮಸ್ಸಿನಿಂದ, ತಾಳ-ಚಪ್ಪಾಳೆ ತಟ್ಟುತ್ತಾ ,ಒಕ್ಕೊರಲಲ್ಲಿ ಹಾಡಿದೆವು.
ವಾಸುದೇವ ಕೃಷ್ಣನ ಸೂಸಿ ಪೂಜಿಸುವಂಥ
ದಾಸರೆಂದರೆ ಪುರಂದರ ದಾಸರಯ್ಯಾ!
![]() |
| ಪುರಂದರ ದಾಸರ ನೆನಪಿನಲ್ಲಿ ಮೂಡಿ ಬಂದಿರುವ ಒಂದು ಕೆತ್ತನೆ. ಇದರ ಮುಂದೆ ಕುಳಿತು ನಡೆಯಿತು ನಮ್ಮ ಪುಟ್ಟ ’ಪುರಂದರೋತ್ಸವ’ |
ಪಕ್ಕದಲ್ಲಿ ಝುಳು-ಝುಳು ಹರಿಯುವ ತುಂಗಾ ನದಿ, ಹಾರುವ ಹಕ್ಕಿಗಳ ಕಲರವ, ನೋಟ ಚಾಚಿದೆಲ್ಲೆಡೆ ಹಚ್ಚ ಹಸಿರು , ಕಲ್ಲು-ಬಂಡೆಗಳ ಸಾಲುಗಳ ದೃಶ್ಯ; ಇವುಗಳ ಮಧ್ಯೆ ತಲೆದೂಗಿಸುವಂಥ, ಹೃದಯ ಅರಳಿಸುವಂಥ ದಾಸರ ರಚನೆಗಳ ಆಸ್ವಾದನೆ...ಅಹಾ ಏಂಥಾ ಆನಂದ! ಪೇಟೆಯ ದಿನನಿತ್ಯದ ಗೌಜು-ಗದ್ದಲ ಜೀವನದಿಂದ ತುಸು ಹೊತ್ತಾದರೂ ಸರಿ, ಮನಸ್ಸಿಗೆ ಮುದ ನೀಡುವ ಅನುಭವ!....
ಪಿಳ್ಳಾರಿ ಗೀತೆಗಳಾದ ಲಂಬೋದರ ಲಕುಮಿಕರ, ಕುಂದಗೌರ ಗೌರೀವರ, ಕೆರೆಯ ನೀರನು ಕೆರೆಗೆ ಚೆಲ್ಲಿ, ಪದುಮನಾಭ ಪರಮಪುರುಷ, ಮಂದರೋದ್ಧಾರೆ ಮೋಕ್ಷ ಮುರಾರೆ, ವರ ವೀಣಾ ಮೃದು ಪಾಣಿ; ಹಾಗೆಯೇ ದೇವರನಾಮಗಳಾದ ಕೊಡು ಬೇಗ ದಿವ್ಯಮತಿ, ಇದು ಭಾಗ್ಯ ಇದು ಭಾಗ್ಯ, ಕಂಡೆ ನಾ ಗೋವಿಂದನ, ರಾಗಿ ತಂದೀರ್ಯಾ ಮತ್ತು ಕೊನೆಯಲ್ಲಿ ಮಂಗಳಕರವಾದ ಭಾಗ್ಯದ ಲಕ್ಷ್ಮೀ ಬಾರಮ್ಮ ಇವೆಲ್ಲವನ್ನು ಹಾಡಿ ಭಾವುಕರಾಗಿ ಧನ್ಯರಾದೆವು. ಇದನ್ನೆಲ್ಲಾ ಕೇಳಿದ ನಾವೆಲ್ಲರೂ, ಅಲ್ಲಿ ಆ ದಿನ ನೆರೆದ ಇನ್ನಿತರ ಪ್ರವಾಸಿಗರು ಹಾಗೂ ಇದೆಲ್ಲವನ್ನು ಓದಿದ ಪ್ರಿಯ ಓದುಗರಾದ ತಾವು ದಾಸಾನುಗ್ರಹವನ್ನು ಪಡೆದದ್ದಲ್ಲಿ ಸಂದೇಹವುಂಟೆ?!
***















